Monday 12 October 2015


16/08/2011
ಏನು ಇಲ್ಲದೆ ಎಲ್ಲವು ಇದ್ದ೦ತೆ ಜೀವಿಸಿದ  ಊರಿನ ಸೂಪರ್,,,,, ಎಲ್ಲವು ಇದ್ದು ಎನು  ಇಲ್ಲದ೦ತೆ ಜೀವಿಸುವ ಇಲ್ಲಿನ ಸಾಲೆಮ್ ಸುಕ್ಕರ್ 






ಏನ್ ಸಾಮಿ ಗುಬೈಯಲ್ಲಿ ಒ೦ಟೆ ಮೇಲೆ ಬೇಸಾಯ ಮಾಡ್ತಾರ೦ತೆ ಹೌದಾ ? ಸೂಪರ್ ಬಾಷೆಯಲ್ಲಿ ಗುಬೈ ಅ೦ದರೆ ದುಬಾಯಿ, ಹಾ! ಇಷ್ಟು ವರ್ಷಗಳಲ್ಲಿ ನಾನು ಇಲ್ಲಿ ಎಲ್ಲಿಯು ಇದು ನೋಡಿಲ್ಲ ಅ೦ಥ ವಿಷಯ ಸೂಪರ್ ಗೆ ತಲುಪಿದೆ. ಆದರೆ ಇರಬಹುದೆನೋ ಗೊತ್ತಿಲ್ಲಾ ಆದರೆ ಇ೦ಥ ವಿಷಯಗಳೆಲ್ಲಾ ಈ ವ್ಯಕ್ತಿಗೆ ಹೇಗೆ ತಲುಪುತ್ತದೆ, ಎನ್ನುವ ಯೋಚನೆಯಲ್ಲೆ  ಅದೆಲ್ಲ ಮತ್ತೆ ನೊಡೋಣ ನಾನು ಮು೦ದಿನವಾರ ಹೋಗುವಾಗ ನೀನು ಬಾ ಒಟ್ಟಿಗೆ ಹೋಗೋಣ ಆಗ ನೀನೆ ಎಲ್ಲಾ ಖುದ್ದು ನಿನ್ನ ಕಣ್ಣಲ್ಲೆ ನೋಡಬಹುದು ಒಳ್ಳೆ ಸ೦ಬಳ ಊಟ ವಸತಿ ಎಲ್ಲಾ ಸಿಗುತ್ತೆ ಎ೦ದೆ,  ಅಯ್ಯೊ ಸ೦ಬಳ ದುಡ್ಡು ಎಲ್ಲಾ ನನಗೆ ಯಾಕೆ ಸಾಮಿ ನಾನು ಇಲ್ಲಿ ಆರಾಮವಾಗಿದ್ದೇನೆ ಸುಖವಾಗಿದ್ದೇನೆ ಸೂಪರ್ ಸೂಪರ್ ಎ೦ದು ನಗುತ್ತಾ ನನಗಿಲ್ಲಿ ಎಲ್ಲರು ಚೆನ್ನಾಗಿ ನೋಡುತ್ತಾರೆ ಎಲ್ಲರು ನನ್ನ ಬ೦ಧುಗಳು ಎ೦ದು ಒ೦ದು ತಮಿಳು ಹಾಡನ್ನು ಜೋರಾಗಿ ಹಾಡಲು ಶುರುಮಾಡಿದ.

ಒ೦ಟಿಯಾಗಿರುವ ಈ ಮನುಷ್ಯನ  ಹೆಸರು ಮುರುಗೇಶ್ ಹುಟ್ಟಿದ್ದು ತಮಿಳುನಾಡಿನ ಯಾವುದೊ ಹಳ್ಳಿ ಆದರೆ ಇಲ್ಲಿ ಶಿವಮೊಗ್ಗಕ್ಕೆ ಬ೦ದು ನೆಲೆಸಿ ಬಹಳ ವರ್ಷಗಳೆ ಕಳೆದಿವೆ,  ಸುತ್ತಮುತ್ತಲಿನ ಜನರಿಗೆಲ್ಲ ಸೂಪರ್ ಅ೦ತಲೆ ಪರಿಚಯ, ಕಾರಣ ಯಾರು ಏನು ಕೆಲಸ ಹೇಳಿದರು ಅಚ್ಹುಕಟ್ಟಾಗಿ ಮಾಡಿ ಮುಗಿಸುವ ಈ ಸೂಪರ್  ಯಾರಾದರು ಹೇಗಿದ್ದೀಯ ಸೂಪರ್ ಎ೦ದ ಕೂಡಲೆ ಉತ್ತರ ಸೂಪರ್ ಸೂಪರ್ ಅದರಿ೦ದಾಗಿಯೆ ಈ ಹೆಸರು ಬ೦ದಿದೆ. ತನ್ನ ಯವ್ವನದಲ್ಲಿ ಅನ್ಯಜಾತಿಯ ಹುಡುಗಿಯನ್ನು ಪ್ರೀತಿಸುತ್ತಿದ್ದ ಸೂಪರ್ ನ ಸ೦ಗತಿ ಮನೆಯವರಿಗೆ ಹೇಗೊ ತಲುಪಿತು ಇದರಿ೦ದ ಎರಡು ಮನೆಯವರ ಮದ್ಯೆ ದೊಡ್ದ ಕೋಲಾಹಲವೆ ನಡೆಯಿತು ಪಟ್ಟು ಬಿಡದ ಸೂಪರ್ ಹುಡುಗಿಯನ್ನು ಹೇಗಾದರು ಮಾಡಿ ಮದುವೆ ಆಗಲೆಬೇಕೆ೦ದು ತೀರ್ಮಾನಿಸಿ ಆಗಿತ್ತು. ಇದನ್ನು ತಿಳಿದ ಹುಡುಗಿಯ ಮನೆಯವರು ಹುಡುಗಿಯನ್ನು ಮನೆಯೊಳಗೆ ಕೂಡಿಹಾಕಿದರು ಇದರಿ೦ದ ಬೇಸತ್ತ ಹುಡುಗಿ ಸೀಮೆ ಎಣ್ಣೆ ಸುರಿದುಕೊ೦ಡು ಆತ್ಮಹತ್ಯೆ ಮಾಡಿಕೊ೦ಡಳು. ಅಲ್ಲಿಗೆ ಸೂಪರ್ ನ ಜೀವನದ ಹಾದಿ ತಪ್ಪಿದ೦ತಾಯಿತು ಅ೦ದು ಆ ನೋವಿನಲ್ಲಿ  ಊರು ಬಿಟ್ಟ ಸೂಪರ್ ಮತ್ತೆ ಊರಿಗೆ ಹೋಗಲ್ಲಿಲ್ಲ. ನೇರ ಬ೦ದು ಇಳಿದದ್ದು ಶಿವಮೊಗ್ಗಕ್ಕೆ, ಹೀಗೆ ಜೀವನ ಪೂರ್ತಿ ಬ್ರಹ್ಮಚಾರಿಯಾಗಿ ಚಿಕ್ಕ ಪುಟ್ಟ ಕೂಲಿ ಕೆಲಸಗಳನ್ನು ಮಾಡುತ್ತ  ಹಾಡುಗಳನ್ನು ಹಾಡುತ್ತಾ ಜೋಕುಗಳನ್ನು ಹೇಳುತ್ತಾ ಜನರನ್ನು ನಗಿಸುತ್ತ ಎಲ್ಲಾ ನೋವುಗಳನ್ನು ಮನರ೦ಜನೆಯ ಮೂಲಕ ಹೊರ ಹಾಕುತ್ತ ಸೂಪರ್ ಸೂಪರ್ ಅನ್ನುತ್ತಾನೆ,  ಸಾಮಾನ್ಯವಾಗಿ ಈ ಬಡಾವಣೆಯ ಎಲ್ಲರೊ೦ದಿಗೆ

 ಒಳ್ಳೆಒಡನಾಟವಿದೆ ಎಲ್ಲರು ಸೂಪರ್ ಗೆ ಸಹಾಯ ಮಾಡುತ್ತಾರೆ. ರಾತ್ರಿ ಮನೆಯ ಕಾ೦ಪೋ೦ಡಿನಲ್ಲಿ ಮಲಗುವಾಗ ಜೋರಾಗಿ ಹಾಡುಗಳನ್ನು ಹಾಡುತ್ತಾ ಹೀಗೆ ನಿದ್ದೆಹೂಗುತ್ತಾನೆ.

ಒ೦ದು ದಿನ ಸ೦ಜೆ ನನ್ನ ಬಳಿ ಬ೦ದು ಸಾಮಿ ನ೦ಗೆ ೧೦ ರೂ ಬೇಕು ಎ೦ದಾಗ ನಾನು ೨೦ ರೂ ಕೊಟ್ಟೆ ಕೂಡಲೆ ಸೂಪರ್ ಹೆ ಸಾಮಿ ನಾನು ಕೇಳಿದ್ದು ೧೦ ರೂ ಅಷ್ಟೆ  ನ೦ಗೆ ಯಾಕೆ ಸಾಮಿ ಜಾಸ್ತಿ ದುಡ್ಡು ಎ೦ದು ಹೇಳಿ ೧೦ ರೂ ಹಿಡಿದು ಜೋರಾಗಿ ತಮಿಳು ಹಾಡನ್ನು ಹಾಡುತ್ತಾ ಅ೦ಗಡಿ ಕಡೆಗೆ ನಡೆಯ ತೋಡಗಿದ, ಹೌದು ಮನುಷ್ಯನಿಗೆ ಜಾಸ್ತಿ ದುಡ್ಡು ಯಾಕೆ ಎ೦ದು ನಾನು ಸೂಪರ್ ನಡೆಯುವ ದಾರಿಯನ್ನೇ ನೋಡತೊಡಗಿದೆ, ತನ್ನ ಬಳಿ ಏನು ಇಲ್ಲ ಆದರು ಎಲ್ಲಾ ಇರುವ೦ತೆಯೆ ಜೀವಿಸುತ್ತಿದ್ದ ಈ ವ್ಯಕ್ತಿ  ಈಗ ಇಲ್ಲ ಇತ್ತೀಚೆಗೆ ಇಹಲೋಕ ತ್ಯಜಿಸಿದ ವಾರ್ತೆ ನನಗೆ ತಲುಪಿತು, ಊರಿಗೆ ಹೋದಾಗಲೆಲ್ಲಾ ಬಹಳ ಹರಟುತಿದ್ದೆ ಕೆಲವು ಫೊಟೊ ತೆಗೆದದ್ದು ಇದೆ ಒಟ್ಟಿಗೆ ನಿ೦ತು ಫೊಟೊ ತೆಗೆದಾಗ ಸೂಪರ್ ನ ಸ೦ತೊಷ ಹೇಳತೀರದ್ದು. ಈಗ ಇಲ್ಲಿ ಮದ್ಯ ರಾತ್ರಿ, ಕಿಟಕಿಯಲ್ಲಿ ಹೊರ ನೋಡಿದರೆ ಜಗಮಗಿಸುವ ಲೈಟುಗಳು ಗಗನಚು೦ಬಿ ಕಟ್ಟಡಗಳು ವಾಹನಗಳ ಓಡಾಟ ಇವೆಲ್ಲದರ ನಡುವೆ ಸೂಪರ್ ನ ನೆನಪುಗಳು, ಉಪವಾಸದ ತಿ೦ಗಳು ಇಡಿ ಅಬುಧಾಬಿ  ಎಚ್ಹರದಲ್ಲಿದೆ ಇಲ್ಲಿ ರಾತ್ರಿ ಹಗಲು ಎಲ್ಲ ಒ೦ದೆ. ಎದುರಿನ ಕಟ್ಟಡದ ಕಿಟಕಿಯಲ್ಲಿ ಸನ್ಹೆಗಳ ಮೂಲಕ ಮಾತನಾಡುವ ಆ ಚಿಕ್ಕ ಮಗು ಈಗ ಮಲಗಿ ಒಳ್ಳೆ ನಿದ್ದೆಯಲ್ಲಿರಬಹುದು, ಮದ್ಯರಾತ್ರಿ ಕಸ ತೆಗೆದುಕೊ೦ಡು ಹೋಗಲು ಬರುವ  ರಾಕ್ಷಸ ರೂಪದ ವಾಹನ  ಕೆಳಗೆ ತನ್ನ ಕೆಲಸ ಆರ೦ಭಿಸಿದೆ ಅದು ಸಹ ಹೈಟೆಕ್  ೨೦ ಜನ ಮಾಡಬೇಕಾದ ಕೆಲಸ ಅದು ಒಬ್ಬನ ಕೈನಲ್ಲಿರುವ ರಿಮೋಟ್ ಮುಖಾ೦ತರ ನಡೆಯುತ್ತಿದೆ, ಏನೋ ನೋವು ಒ೦ದು ದುಃಖ ಅ೦ತರಾಳದಲ್ಲಿ,

 ಕೆಲವು ಸ೦ಭ೦ದಗಳು ಹೀಗೆ ಎಲ್ಲಿ೦ದಲೊ ಬ೦ದು ಸೇರಿಕೊ೦ಡುಬಿಡುತ್ತವೆ ಅವು ಇದ್ದಕ್ಕಿದ್ದ೦ತೆ ದೂರಾದಾಗ ಒ೦ಟಿತನದ ಭಾವನೆ ಆವರಿಸತೊಡಗುತ್ತದೆ,    ಸೆಲ್ ರಿ೦ಗಾಗುತ್ತಿದೆ,

ಒಹ್ ಮಲಗಿಲ್ಲವೇನೊ ಎ೦ಬ ಮಾತಿನೊ೦ದಿಗೆ ಶುರುವಾದ  ಸಾಲೆಮ್ ಸುಕ್ಕರ್  ಅ೦ದರೆ ಅಬು ಮಾಜಿದ್  ನಾಳೆ ಸ೦ಜೆ ಅರಬ್ ಉಡುಪಿ ರೆಸ್ಟೊರೆ೦ಟ್ ಗೆ ಹೋಗೋಣ ಮಸಾಲ ಡೊಸ ತಿನ್ನಬೇಕು, ಅದೆ ಮಸಾಲೆ ದೋಸೆ ಒಹ್ ಈ ರಾತ್ರಿ ನಿನಗೆ ಅದ ನೆನಪಾಗಿದ್ದು, ಅದೆ ಅದೆ  ಮೊನ್ನೆ ತಿ೦ದದ್ದು ಮರೆತು ಹೋಯ್ತ, ಸಾಕು ಸುಮ್ನಿರೊ  ಎ೦ದು ಏನೆಲ್ಲ ಮಾತನಾಡಿ ಪ್ರಪ೦ಚದಾದ್ಯ೦ತ ಶೇರು ಮಾರುಕಟ್ಟೆ ಕುಸಿದಿದೆ  ಬ೦ಗಾರದ ಬೆಲೆ ಜಾಸ್ತಿಯಾಗಿದೆ ಎ೦ದೆಲ್ಲ ಮಾತನಾಡಿ ಅಲ್ಲ ಕಣೊ ಹಬ್ಬಕ್ಕೆ ಯಾರಾದರು ಬರುವವರಿದ್ದರೆ ಮಾವಿನ ಉಪ್ಪಿನಕಾಯಿ ಮತ್ತು ಸೊ೦ಟ ನೋವಿನ ಎಣ್ಣೆ ತರಲು ಹೇಳೊ,,,ಎ೦ದು ಹೇಳುತ್ತಾ ಆಯ್ತು ನಾಳೆ ಸಿಗೋಣ ಬೈ ಹ ಇದು ಸಾಲೆಮ್ ಸುಕ್ಕರ್ ಮಾತು ಕಥೆ,


ಸಾಲೆಮ್ ಸುಕ್ಕರ್ ನಾನು ಇಲ್ಲಿ ಬ೦ದು ಕೆಲವೆ ದಿನಗಳಲ್ಲಿ ಪರಿಚಯವಾದ ವ್ಯಕ್ತಿ ಅರಬ್  ರಾಷ್ಟ್ರೀಯಾ, ಇಲ್ಲಿ ಒಳ್ಳೆ ಸರ್ಕಾರಿ ಹುದ್ದೆಯಲ್ಲಿರುವ ಈ ವ್ಯಕ್ತಿ ಬಹಳಷ್ಟು ದೇಶಗಳನ್ನು ಸುತ್ತಿ ನೋಡಿಯಾಗಿದೆ ಅದರಲ್ಲು ಭಾರತ ವನ್ನು ಬಹಳಷ್ಟು ಬಾರಿ ಭೇಟಿ ಮಾಡಿಯಾಗಿದೆ. ಅಲ್ಲಿಯ ಸ೦ಸ್ಕೃತಿ, ಕಟ್ಟಡಗಳು ಜನರ ಜೀವನ ಪದ್ದತಿ ಎಲ್ಲವನ್ನು ಕಲೆ ಹಾಕಿರುವ ಈ ವ್ಯಕ್ತಿ ಅಷ್ಟೊ೦ದು ಎತ್ತರದ ಹುದ್ದೆಯಲ್ಲಿದ್ದರು ಸಾಮಾನ್ಯ ಮನುಷ್ಯರ೦ತೆಯೆ ಜೀವನ ಶೈಲಿಯನ್ನು ಅಳವಡಿಸಿಕೊ೦ಡಿದ್ದಾರೆ.  ಸಸ್ಯಹಾರಿ ಹೋಟೇಲುಗಳಿಗೆ ಹೋದರೆ ಮಸಾಲೆ ದೋಸೆಯನ್ನು ತಿ೦ದು ಮುಗಿಸುವ ಮೊದಲೇ ಇಡ್ಲಿ ವಡೆ ಹೇಳುತ್ತಾ ಅದನ್ನು ತಿ೦ದು ಮುಗಿಸಿ ಅಲ್ಲಿರುವ ಎಲ್ಲರೊ೦ದಿಗೆ ಮಾತನಾಡುತ್ತ ಬಹುದ್ ಅಜ್ಜ ಹೈ  ಎ೦ದು ಹೇಳಿ ಎಲ್ಲರಿಗು ಕೈ ಕುಲುಕಿ ಹೊರಬ೦ದು ಅಲ್ಲ ಕಣೊ ನಿಮ್ಮ ಭಾರತೀಯ ಊಟ ತಿ೦ಡಿ  ಇಷ್ಟೊ೦ದು ರುಚಿ ಇದೆ ಮತ್ಯಾಕೊ ನಿಮ್ಮ ಜನರೆಲ್ಲ  ಕೆ೦ಟುಕಿ, ಪಿಜಾ, ಬರ್ಗರ್ ಹಿ೦ದೆ ಓಡ್ತಾರೆ,   ಈಗ ನೊಡು ಮಸಾಲೆ ದೋಸೆಗೆ ಒ೦ದು ಬಿಳಿ ಚಟ್ನಿ ಒ೦ದು ಕೆ೦ಪು ಚಟ್ನಿ ಅದು ಬಹಳ ರುಚಿ, ಅದೆ ಇಡ್ಲಿ ಗೆ ಸಾ೦ಬಾರ್ ಸಕತ್ ರುಚಿ, ಮು೦ದಿನ ವಾರ ದುಬೈ ವೀನಸ್ ಹೊಗೋಣ  ಅಲ್ಲಿ ಟಾಲಿ ಒಳ್ಳೆ ರುಚಿ  ಟಾಲಿ ಅಲ್ಲ ಥಾಲಿ  ಅದೆ ಅದೆ ಹೀಗೆ ಮಾತುಗಳ ಸುರಿಮಳೆ,  ಭಾರತದ ಉಡುಗೆ ತೊಡುಗೆ  ಊಟ ಜನಜೀವನ ಎಲ್ಲವನ್ನು ಚೆನ್ನಾಗಿ ಅರಿತಿರುವ ಈ ವ್ಯಕ್ತಿ ಎಲ್ಲವೂ ಇದ್ದು ಸಾಮನ್ಯ ವ್ಯಕ್ತಿಯ೦ತೆ ಇರುವುದೇ ಒ೦ದು ಸ೦ಗತಿಯಾಗಿ ತೋರುತ್ತದೆ.

ಶ್ರೀಮತಿ ಇ೦ದಿರಾಗಾ೦ಧಿಯವರು ಮೊದಲ ಭೇಟಿ  ಯು. ಎ. ಇ.  ಬ೦ದಾಗ ಅರಬ್ ರಾಯಭಾರಿಯಾಗಿ ೩ ದಿನಗಳು ಅವರೊ೦ದಿಗೆ  ಓಡಾಡಿದ್ದು ಅವರ ಕಾಲದ ಅಬುಧಾಬಿ ಹೇಗಿತ್ತು ಏರ್ಪೋರ್ಟ್ ಹೇಗಿತ್ತು ಈಗ ಕೆಲವೇ ವರ್ಷಗಳಲ್ಲಿ ಎಷ್ಟೊ೦ದು ಬದಲಾವಣೆಗಳಾಗಿವೆ ಆಕಾಶದೆತ್ತರದ ಕಟ್ಟಡಗಳು ಐಶಾರಾಮಿ ಕಾರುಗಳು ಯ೦ತ್ರಗಳು ಮನುಷ್ಯರು ಎಲ್ಲವು ಬದಲಾಗಿವೆ ಕಣೊ ಆದರೆ ನಾನು ಮಾತ್ರ ಹಾಗೆ ಇದ್ದೇನೆ ನೋಡು ಎ೦ದು ಹೇಳುವಾಗ ನಾನು ನಕ್ಕರೆ ಗೊತ್ತು ಕಣೊ ನೀನು ನಕ್ಕಿದ್ದು  ನಾನು ಮುದುಕನಾಗಿದ್ದೆನೆ ಅ೦ತ ಜೋರಾಗಿ ನಗುವ ಈ ವ್ಯಕ್ತಿ ಊರಿನ ಸೂಪರ್ ನೆನಪಿಗೆ ಬರುವ೦ತೆ ಮಾಡುತ್ತದೆ.
ಏನು ಇಲ್ಲದೆ ಎಲ್ಲವು ಇದ್ದ೦ತೆ ಜೀವಿಸಿದ  ಊರಿನ ಸೂಪರ್,,,,, ಎಲ್ಲವು ಇದ್ದು ಎನು  ಇಲ್ಲದ೦ತೆ ಜೀವಿಸುವ ಇಲ್ಲಿನ ಸಾಲೆಮ್ ಸುಕ್ಕರ್  ಇಬ್ಬರಲ್ಲು ಸ್ನೆಹಮಯ ಹೃದಯ, ಭಾವನಾತ್ಮಕ ಮಾತುಗಳು ಮನುಷ್ಯ ಮನುಷ್ಯ ರೊ೦ದಿಗಿನ ಗೌರವ, ಶಾ೦ತ ಸ್ವಭಾವ ಆತ್ಮೀಯತೆ ಎಲ್ಲವು ಒ೦ದೆ, ಮನುಶ್ಯನ ಜೀವನ ಮನಸ್ಸಿನ ಮೇಲೆ ಆಧರಿಸುತ್ತದೆ.

ಮ೦ದವಾದ ಬೆಳಕಿನಲ್ಲಿ ಎಲ್ಲವು ಶಾ೦ತವಾಗಿರುವಾಗ ಕೊಟಡಿಯ ಮದ್ಯೆ  ಮೇಲ್ಭಾಗದಲ್ಲಿ ತೂಗುತ್ತಿರುವ ವಿ೦ಡ್ ಶೈಮ್ ನಿಧಾನವಾಗಿ ಇ೦ಪಾಗಿ ತರ೦ಗಗಳನ್ನು ಸ್ಪುಟಿಸುತ್ತಿದೆ, ಅದೂ ಸಹ ತನಗೆ ತಾಗುವ ಪ್ರೀತಿಯ ಗಾಳಿಯ ಅಲೆಗಳೊ೦ದಿಗೆ ಮೃದುವಾಗಿ ತನ್ನದೇ ಆದ ಲೋಕದಲ್ಲಿ ವಿಹರಿಸುತ್ತಿದೆ. ಈ ನಿಶ್ಯಬ್ಧತೆಯಲ್ಲು ಅದು ಗೆಳೆಯ ನೋಡು ನಾನು ಸಹ ನನ್ನದೆ ಆದ ರೀತಿಯಲ್ಲಿ ವಿಹರಿಸುತ್ತಿದ್ದೇನೆ ಎನ್ನುತ್ತಿರುವ೦ತೆ ಭಾಸವಾಗುತ್ತಿದೆ.

No comments:

Post a Comment